Friday, January 28, 2011

ಮೈಸೂರಿನಲ್ಲೊಬ್ಬ ಸಾವವಯ ಕೃಷಿಕ
ಅರಣ್ಯಾಧರಿತ ತೋಟ ಮಾಡಿ ಗೆದ್ದ



ಓದಿದ್ದು ಎಂಎಸ್ಸಿ, ಬಯಸಿದ್ದು ಐಎಫ್ಎಸ್
ಆಗಿದ್ದು `ಮಾಸ್ಟರ್' ಆಫ್ ಕೃಷಿ !


ಕೃಷಿ ಅಂದ್ರೆ ಏನು ? - ಅದೊಂದು ದೇಶದ ಬೆನ್ನೆಲುಬು, ಅನ್ನ ಸೃಷ್ಟಿಸುವ ಮಹಾನ್ ಕಾಯಕ, ಮೇಟಿ ವಿದ್ಯೆ, ಸಂಸ್ಕೃತಿ, ಜೀವನ ಪದ್ಧತಿ... ಹೀಗೆ ಸೂರ್ಯನ ನೆತ್ತಿಯ ಕೆಳಗಿನ ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ, ಅದೊಂದು ಖುಷಿ ನೀಡುವ ಕಲೆ, ಅಷ್ಟು ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ ವ್ಯವಹಾರ. ಯಂತ್ರೋಪಕರಣ ಬಳಕೆ, ಸಾವಯವ ಪದ್ಧತಿ ಹಾಗೂ ಅರಣ್ಯ ಆಧಾರಿತ ವಾಗಿ(ಒಂದು ಪ್ರಯೋಗ) ದುಡಿಸಿಕೊಂಡರೆ, ಅದೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾದರಿಯ ವ್ಯವಹಾರ ಎಂದು ಅಚ್ಚರಿ ಮೂಡಿಸುತ್ತಾರೆ !
ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ಜಿ. ಬಿ. ಸರಗೂರಿನಲ್ಲಿ, ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ 25 ಎಕರೆ ವಿಶಾಲ ತೋಟದಲ್ಲಿ ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಅರಳಿ ನಿಂತಿದೆ.
ಅಂದಹಾಗೆ ಇದು-ಸಾವಯವ ಕೃಷಿಕನೊಬ್ಬನ ಯಶೋಗಾಥೆ. ಮೈಸೂರು ವಿಶ್ವವಿದ್ಯಾನಿಲಯಲ್ಲಿ ಎಂಎಸ್ಸಿ ಕಲಿತು, ವನ್ಯಜೀವಿಗಳ ಕುರಿತು ಸಂಶೋಧನೆಗಿಳಿದು, ಕೆಲ ಕಾಲ ಐಎಫ್ಎಸ್ ಅಧಿಕಾರಿ ಆಗಬೇಕೆಂದು ಸ್ಪರ್ದಾತ್ಮಕ ಪರೀಕ್ಷೆ ಬರೆದು, ಕಟ್ಟಕಡೆಗೆ ಕೃಷಿ ಕಡೆ ಹೊರಳಿ ನಿಂತಿರುವ 37 ವರ್ಷದ ಕೆ. ವೆಂಕಟೇಶ್ ಇಲ್ಲಿನ ಕಥಾನಾಯಕ.
ಐದು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಜಮೀನು ಖರೀದಿಸಿ, ಸಾವಯವ ಪದ್ಧತಿಯಡಿ, ಅರಣ್ಯಾಧಾರಿತ ಕೃಷಿ ಮಾಡಲು ನಿಂತಾಗ, ವೆಂಕಟೇಶ್ ಅವರನ್ನು ಸುತ್ತಮುತ್ತಲಿನ ರೈತರು ಹುಚ್ಚಪ್ಪ ಅಂದ್ರು ! ಆದರೆ, ಈ ಹುಚ್ಚು ಕನಸುಗಳೇ ಒಂದೊಂದಾಗಿ ನನಸಾಗಲಾರಂಭಿಸಿದಾಗ, ಅದೇ ವೆಂಕಟೇಶ್ ಕೃಷಿಯ ಮಾಸ್ಟರ್ ಆದ್ರು.
ಮೈಸೂರಿನಿಂದ ಸುಮಾರು 20 ಕಿ. ಮೀ. ದೂರದಲ್ಲಿ ವೆಂಕಟೇಶ್ ತೋಟವಿದೆ. ಅಡಿಕೆ, ತೆಂಗು, ಬಾಳೆ, ಪರಂಗಿಯಂಥ ತೋಟಗಾರಿಕೆ ಬೆಳೆಗಳು, ಭತ್ತ, ಗೋಧಿ, ಎಳ್ಳು, ಮೆಕ್ಕೆಜೋಳ, ರಾಗಿಯಂಥ ಧವಸ-ಧಾನ್ಯಗಳು, ಹುಣಸೆ, ಬೆಟ್ಟದ ನಲ್ಲಿ, ಬೆಲ್ಲದ ಮರ, ಸೀತಾಫಲ, ರಾಮಫಲ, ಸೀಬೆ, ಕಿರುನೆಲ್ಲಿ, ಬೇವು, ಶ್ರೀಗಂಧ ಸೇರಿದಂರೆ ನಾನಾ ಜಾತಿಯ ಮರಗಳಿಂದ ಸಮೃದ್ಧವಾಗಿರುವ ಈ ತೋಟ- ಅರಣ್ಯ ಆಧಾರಿತ ಕೃಷಿಯ ಒಂದು ಮಾದರಿ. ಸಾವಯವ ಪದ್ಧತಿಯಲ್ಲಿಯೇ ತೋಟ ಅರಳಿ ನಿಂತಿರುವುದರಿಂದ, ಇಲ್ಲಿ ಹಸು, ಕೋಳಿ, ನಾಯಿಯಂಥ ದೇಸಿ ಜಾತಿಯ ಸಾಕು ಪ್ರಾಣಿಗಳಿವೆ. ತೋಟಕ್ಕೆ ಕಾಡಿನ ನಂಟಿರುವುದರಿಂದ, ಇಲ್ಲಿ ನಿತ್ಯವೂ ನೂರಾರು ಜಾತಿಯ ಪಕ್ಷಿಗಳ ಕಲರವ ಕೇಳಬಹುದು. ಕೂಲಿ ಸಮಸ್ಯೆ ಇರುವುದರಿಂದ, ವೆಂಕಟೇಶ್ಗೆ ಕೃಷಿ ಯಂತ್ರೋಪಕರಣಗಳೇ ಆಳು-ಕಾಳು, ಎತ್ತು-ಜಾನುವಾರು. ಪ್ರಯೋಗ ಶೀಲತೆಗೆ ಒತ್ತು ನೀಡಿರುವುದರಿಂದ ಜೇನು ಕೃಷಿಗೂ ತೋಟ ಆಸರೆ ನೀಡಿದೆ. ಎರಡೇ ಎರಡು ಬೋರ್ವೆಲ್ಗಳಿಂದ ಚಿಮ್ಮುವ ನೀರನ್ನು ಹನಿ-ಹನಿಯಾಗಿ ಬಳಸಿಕೊಂಡು, ಹನಿಗಾರಿಕೆಯ ಮಹತ್ವವನ್ನೂ ತೋಟ ಸಾರುತ್ತಿದೆ. ಹಾಗಾಗಿ ಇದೊಂದು ಸಮಗ್ರ ತೋಟವೂ ಹೌದು !
ಸಾವಯವ ದ್ರಾವಣ -ಗ್ಲುಕೋಸ್
ಕೃಷಿಯನ್ನು ಲಾಭದಾಯಕ ಮಾಡಬೇಕೆಂಬ ಬಯಕೆ ಇಟ್ಟುಕೊಂಡೇ ಕೃಷಿಗೆ ಇಳಿದ ವೆಂಕಟೇಶ್, ಆರಂಭದಲ್ಲಿಯೇ ರಾಸಾಯನಿಕ ಗೊಬ್ಬರದ ಸೋಂಕಿಲ್ಲದ ಸಾವಯವ ಕೃಷಿಗೆ ಶರಣೆಂದರು. ತಿಪ್ಪೇಗೊಬ್ಬರವನ್ನೂ ಅತಿಯಾಗಿ ಬಳಸುವುದು ಬೇಡ ಅನಿಸಿತು. ಹಾಗಾಗಿ ಕೊಟ್ಟಿಗೆ ಗೊಬ್ಬರಕ್ಕಾಗಿ ಎರಡೇ ಎರಡು ಹಸುಗಳನ್ನು ಮಾತ್ರ ಹೊಲದಲ್ಲಿ ತಂದು ಕಟ್ಟಿಕೊಂಡಿದ್ದಾರೆ. ಪ್ಲಾಸ್ಟಿಕ್ ಮತ್ತು ಗ್ಲಾಸ್ ಹೊರತು ಪಡಿಸಿ ತೋಟದಲ್ಲಿ ಉತ್ಪಾದನೆಯಾಗುವ ಕಳೆ, ತರಗು-ತ್ಯಾಜ್ಯ, ಹಸಿರು ಸೊಪ್ಪು-ಸೆದೆಯನ್ನೇ ವ್ಯವಸ್ಥಿತವಾಗಿ ಕೊಳಸಿ, ಅದರಲ್ಲಿಯೇ ರಸ ತೆಗೆಯುವ ವಿಧಾನ ಅಳವಡಿಸಿಕೊಂಡಿದ್ದಾರೆ. ಈ ಅರ್ಥದಲ್ಲಿ ತೋಟ ಭಾಗಷಃ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಪದ್ಧತಿಯೂ ಹೌದು.
ತೋಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೆಗಣಯೊಂದಿಗೆ ಕೊಳೆಸಿ, ಅದರಿಂದಲೇ ದ್ರವರೂಪದ ಕೊಟ್ಟಿಗೆ ರಸವನ್ನು ತೆಗೆಯುವ `ಅಮೂಲ್ಯಸಾರ ತಯಾರಿಕೆ ಮತ್ತು ಸಂಗ್ರಹಣೆ' ವಿಧಾನವನ್ನು ತೋಟದಲ್ಲಿ ಪರಿಚಯಿಸಲಾಗಿದೆ. ಈ ಮಾದರಿಯಲ್ಲಿ ಹೆಚ್ಚು ಸೆಗಣಿಯ ವಾಸನೆ ಇಲ್ಲ. ಎರೆಹುಳು ತಯಾರಿಕೆಗೂ ಇಲ್ಲಿ ಅವಕಾಶವಿದೆ.
ಅರಣ್ಯ ಆಧಾರಿತ ಕೃಷಿ
ಸುತ್ತಮುತ್ತಲಿನ ಪರಿಸರ ಸಮತೋಲದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ತೋಟದ ಒಂದು ಭಾಗದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಏನನ್ನೂ ಬೆಳೆದಿಲ್ಲ. ಹಾಗಾಗಿ ಅಲ್ಲಿ ಕಾಡು ಬೆಳೆದು ನಿಂತಿದೆ. ಬೇವು, ಶ್ರೀಗಂಧ, ರಾಮಫಲ, ಸೀಬೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಮರಗಿಡಗಳು ನೈಸಗರ್ಿಕವಾಗಿ ಬೆಳೆದಿವೆ. ಆ ಪ್ರದೇಶದಲ್ಲಿಯೇ ಕೃತಕವಾಗಿ ಎರಡು ಜರಿಗಳನ್ನು ನಿರ್ಮಿಸಿದ್ದಾರೆ . ಹಾಗಾಗಿ ತೋಟದಲ್ಲಿ 80 ಜಾತಿಯ ಪಕ್ಷಿಗಳಿವೆ. ಕೃಷಿಗೆ ಕೂಲಿಕಾರ್ಮಿಕರ ಕೊರತೆ ಇರುವುದರಿಂದ, ವೆಂಕಟೇಶ್ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕಳೆ ಕೀಳಲು, ಗುಂಡಿ ಹೊಡೆಯಲು, ಅಡಿಕೆ ಕೀಳಲು- ಎಲ್ಲದಕ್ಕೂ ಯಂತ್ರಗಳು. ಇದರಿಂದ ಹಣ ಹಾಗೂ ಶ್ರಮ- ಎರಡೂ ಉಳಿತಾಯವಾಗುತ್ತದೆ ಎನ್ನುತ್ತಾರೆ ವೆಂಕಟೇಶ್.
ಅಂದಹಾಗೆ ಈ ತೋಟವನ್ನು ಖರೀದಿ ಮಾಡಿರುವುದು ವೆಂಕಟೇಶ್ ಸ್ನೇಹಿತರಾದ ಚಂದ್ರಶೇಖರ್ ದಂಪತಿ. ವೆಂಕಟೇಶ್ ಇಲ್ಲಿ ತಮ್ಮ ಬುದ್ಧಿ-ಕೌಶಲವನ್ನು ಬಂಡವಾಳವಾಗಿ ಹೂಡಿದ್ದಾರಷ್ಟೆ. ಹಾಗಾಗೀ ಇಬ್ಬರು ಇದರ ಪಾಲುದಾರರು. ಉಳುವವನೂ ಇಲ್ಲಿ ಭೂ ಒಡೆಯ. ಕಂಪನಿಯ ನೀತಿ, ಸಹಕಾರಿ ತತ್ತ್ವವೂ ಇದೇ !ವೆಂಕಟೇಶ್ ಮೊಬೈಲ್ ನಂಬರ್ 9945290334
- ಚೀ. ಜ. ರಾಜೀವ

No comments:

Post a Comment