Tuesday, January 26, 2010





ದಿನಾಂಕ ೨೮-೧೨-೦೯ ರಂದು ಜಿ .ಬಿ.ಸರಗೂರಿನಲ್ಲಿ ನಡೆದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದ ಚಿತ್ರಗಳು

Thursday, January 21, 2010

ಕಬ್ಬಿನಲ್ಲಿ ಕುಂಬಳಕಾಯಿ ಶಿವರಾಮೇಗೌಡ

'ಎಲ್ಲರೂ ಕಬ್ಬಿನಲ್ಲಿ ಅಂತರ ಬೆಳೆಗಳನ್ನು ಮೊದಲ ಮೂರು ತಿಂಗಳ ಒಳಗೇ ಬೆಳೀಬೇಕು ಅಂತಾರೆ. ಆಮೇಲೆ ಯಾಕೆ ಬೆಳೀಬಾರದು ಅಂತ ಆಲೋಚನೆ ಮಾಡಿದೆ. ಮೂರು ತಿಂಗಳು ಕಳೆದ ಮೇಲೆ, ದೊಡ್ಡ ಮುರಿ ಮಾಡಿದ ಜಮೀನಿನ ತೆವರೀಲಿ ಕುಂಬಳಕಾಯಿ ಬೀಜ ಮಾಡಿದೆ. ಅದು ಬೆಳೆದು ಕಬ್ಬಿಗೇ ಹಬ್ಬಿತು. ನಾನೇ ಅಚ್ಚರಿಪಡುವಂತೆ ನನಗೆ ಮೂರರಿಂದ ನಾಲ್ಕು ಟನ್ ಕುಂಬಳಕಾಯಿ ಸಿಕ್ತು. ಆ ಸರಿ ನನಗೆ ಹತ್ತು ಸಾವಿರ ರೂಪಾಯಿ ಕುಂಬಳಕಾಯಿಯಿಂದ ಸಿಕ್ತು. ಅದು ನಾನು ಆ ವರುಷ ಕಬ್ಬಿನ ಬೇಸಾಯಕ್ಕೆ ಮಾಡಿದ ವೆಚ್ಹ .ನನಗೆ ಪುಕ್ಕಟೆಯಾಗಿ ಕಬ್ಬು ಬೆಳೆದಂತಾಯ್ತು. ಯಾಕೆ ಎಲ್ಲ ರೈತರೂ ನನ್ನ ವಿಧಾನವನ್ನೇ ಅನುಸರಿಸಬಾರದು ಸಾರ್ ಅಂತ ಶಿವರಾಮೇಗೌಡರು ಮಾತನಾಡ್ತಿದ್ರೆ, ಇವರು ರೈತನಾ? ಅಥವಾ ವಿಜ್ಞಾನಿಯಾ? ಅನ್ನುವ ಅನುಮಾನ ಮೂಡುತ್ತೆ. ಕೃಷಿ ವಿಜ್ಞಾನಿಗಳು ಮಾಡಬೇಕಾದ ಸಂಶೋಧನೆಯನ್ನು ರೈತನಾಗಿ ಶಿವರಾಮೇಗೌಡ ಮಾಡಿದ್ದಾರೆ. ಹಾಗಾಗಿ ಬಾನುಲಿ ಕೃಷಿಕರ ಬಳಗದ ವತಿಯಿಂದ ಕೆ.ಸಿ. ಶಿವರಾಮೇಗೌಡರನ್ನು ನಾವು ಪ್ರೀತಿಯಿಂದ ಕಬ್ಬಿನಲ್ಲಿ ಕುಂಬಳಕಾಯಿ ಶಿವರಾಮೇಗೌಡ ಅಂತ ನಾಮಕರಣ ಮಾಡಿದ್ದೇವೆ. ಕುಂಬಳಕಾಯಿ ಗೌಡರೇ ಅಂದರೆ ಬಾಯ್ತುಂಬಾ ನಗುವ ಗೌಡರು, ಜೇಬಿನಲ್ಲಿ ಸದಾ ಇಟ್ಟಿರುವ ಕುಂಬಳಕಾಯಿ ಬಿತ್ತನೆ ಬೀಜವನ್ನು ನೀಡ್ತಾರೆ. ಈಗಾಗಲೇ ಮೈಸೂರು, ಮಂಡ್ಯ, ಹಾಸನ, ರಾಮನಗರ, ಚಾಮರಾಜನಗರ, ತುಮಕೂರು, ಕರ್ನಾಟಕದ ನಾನಾ ಜಿಲ್ಲೆಗಳಿಗೆ ತಂತ್ರಜ್ಞಾನವನ್ನು, ಬಿತ್ತನೆ ಬೀಜವನ್ನು ಗೌಡರು ಹಂಚಿದ್ದಾರೆ. ಗೌಡರು ಈಗ ಮಂಡ್ಯದ ಜಿಲ್ಲಾ ಕ್ಥಷಿ ತರಬೇತಿ ಶಾಲೆಗೆ ಅವಧಿ ಉಪನ್ಯಾಸಕರು. ಕೃಷಿ ತರಬೇತಿಗೆಂದು ಬರುವ ರೈತರಿಗೆ ತಮ್ಮ ಜಮೀನಿನಲ್ಲಿಯೇ ನಿಂತು ಕೃಷಿ ಪಾಠ ಹೇಳುತ್ತಾರೆ. ಕೃಷಿ ಇಲಾಖೆಗೆ ಭೇಟಿ ನೀಡುವ ದೇಶ, ವಿದೇಶಗಳ ಅತಿಥಿಗಳೂ ಸಹ ಶಿವರಾಮೇಗೌಡರ ಸಾಧನೆ ನೋಡಿ, ಕೇಳಿ ಬೆರಗಾಗಿದ್ದಾರೆ.
ಶಿವರಾಮೇಗೌಡರಿಗೆ ಈಗ ತಮ್ಮದೇ ಸಂಶೋಧನೆಯನ್ನು ವಿಸ್ತರಿಸುವ ಆಸೆ ಬಂದಿದೆ. ಇದೀಗ ಕಬ್ಬಿನಲ್ಲಿ ಅಂತರಬೆಳೆಯಾಗಿ ಬೂದಕುಂಬಳಕಾಯಿ ಬೆಳೆದು ಯಶಸ್ವಿಯಾಗಿದ್ದಾರೆ. ಮುಂದೆ ಕಲ್ಲಂಗಡಿ, ಸೌತೆ, ಹೀರೆ ಈ ರೀತಿ ಇತರೇ ಬಳ್ಳಿ ಜಾತಿಯ ಬೆಳೆ ಬೆಳೆಯುವ ಇರಾದೆ ಇದೆ. ಎಲ್ಲ ಪ್ರಯೋಗದಲ್ಲೂ ಯಶಸ್ವಿಯಾಗುವ ದೃಢ ವಿಶ್ವಾಸ ಇದೆ.
ಮೂರು ತಿಂಗಳ ನಂತರ ಬೆಳೆಯುವ ಅಂತರ ಬೆಳೆಗಳು ಕಬ್ಬಿಗೆ ಯಾವುದೇ ಹಾನಿ ಕೊಡುವುದಿಲ್ಲ. ಆರಂಭದಲ್ಲಿ ಕಬ್ಬಿಗೆ ಹಬ್ಬಿ ಬೆಳೆಯುವ ಬೆಳೆಗಳು, ಕಾಯಿ ಭಾರವಾದಂತೆ ನಿಧಾನವಾಗಿ ನೆಲಕ್ಕೆ ಸರಿಯುತ್ತೆ. ಮೇಲೆ ಕಬ್ಬು ಭರ್ಜರಿಯಾಗಿ ಬೆಳೆದಿದ್ದೆ, ಕೆಳಗಡೆ ದೊಡ್ಡ ದೊಡ್ಡ ಕುಂಬಳಕಾಯಿ ನಗುನಗುತ್ತಿರುತ್ತೆ. ಶಿವರಾಮೇಗೌಡರು ಹೇಳುವಂತೆ ಆರಂಭದ ಮೂರು ತಿಂಗಳಲ್ಲಿ ಬೀನ್ಸ್, ಬೆಂಡೆ, ಮೂಲಂಗಿ, ಮೆಣಸು ಬೆಳೆ ಬೆಳೆದು ನಂತರ ದೊಡ್ಡ ಮುರಿ ಆದಮೇಲೆ ಕುಂಬಳ ಬಿತ್ತನೆಯನ್ನು ತೆವರಿ ಮೇಲೆ ಬಿತ್ತಿದರೆ ಆಯ್ತು. ಕಬ್ಬಿನ ಜೊತೆಜೊತೆಯಲ್ಲಿ ಐದಾರು ಉಪಬೆಳೆ ಬೆಳೆಯಬಹುದು. ಮತ್ತೊಂದು ಪ್ರಮುಖವಾದ ವಿಚಾರ ಏನೆಂದರೆ ಶಿವರಾಮೇಗೌಡರ ವಿಧಾನದಲ್ಲಿ ಕಬ್ಬಿನ ಸಾಲಿನ ನಡುವಿನ ಅಂತಹ ಹೆಚ್ಚಿಸುವ ಅಗತ್ಯವಿಲ್ಲ. ಕಬ್ಬನ್ನು ಮಾಮೂಲಿ ಮೂರು ಅಡಿ ಸಾಲಿನಲ್ಲಿ ಬೆಳೆದಿದ್ರೂ, ಕುಂಬಳಕಾಯಿ ಬೆಳೀಬಹುದು. ಐದು ಅಡಿ ಅಂತರದ ಸಾಲಿನಲ್ಲಿ ಕಬ್ಬು ಬೆಳೆದ್ರೆ ಅನುಕೂಲ ಅಷ್ಟೆ.
ಕೆ.ಸಿ. ಶಿವರಾಮೇಗೌಡರು ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದವರು. ಚನ್ನೇಗೌಡ, ಸಾಕಮ್ಮನವರ ಸುಪುತ್ರರು. ಬಿಎಸ್ಸಿ ಪದವೀಧರರು. ಪ್ರಗತಿಪರ ಕೃಷಿ ಚಿಂತಕರು. ಶ್ರೀ ಪದ್ದತಿಯಲ್ಲಿ ಭತ್ತ, ಸಮಗ್ರ ಪೋಶಕಾಂಶಗಳ ನಿರ್ವಹಣೆಯಲ್ಲಿ ಕಬ್ಬು, ಹಸಿರೆಲೆ ಗೊಬ್ಬರದ ಬಳಕೆ ಹೀಗೆ ಹತ್ತು ಹಲವು ಪ್ರಯೋಗಗಳನ್ನು ಗೌಡರು ಮಾಡಿದ್ದಾರೆ.
ಶಿವರಾಮೇಗೌಡರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಮಂಡ್ಯದ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, 2006ರ ದಸರಾ ಫಲಪುಷ್ಪ ಪ್ರದರ್ಶನ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯದ 'ಶ್ರೇಷ್ಠ ಕೃಷಿಕರ ಪ್ರಶಸ್ತಿ' ಉದಾಹರಿಸಲು ಯೋಗ್ಯವಾದವು. ಶಿವರಾಮೇಗೌಡರಿಂದ ಕುಂಬಳ ಬಿತ್ತನೆ ಬೀಜ ಪಡೆದು ತಮ್ಮ ಕಬ್ಬಿನಲ್ಲಿ ಕುಂಬಳಕಾಯಿ ಬೆಳೆದ ಮದ್ದೂರು ತಾಲ್ಲೂಕು ಸಬ್ಬನಹಳ್ಳಿಯ ನಾಗರಾಜು ಮಂಡ್ಯದಲ್ಲಿ ಬಹುಮಾನ ಗಳಿಸಿದ್ದು ಶಿವರಾಮೇಗೌಡರಿಗೆ ಸಂತಸ ತಂದ ವಿಶೇಷ. ಆಕಾಶವಾಣಿಯ ನೇರ ಫೋನ್ಇನ್ ಕಾರ್ಯಕ್ರಮದಲ್ಲಿ ಸಹಾ ಶಿವರಾಮೇಗೌಡರದೊಂದು ಕಾಲ್ ಇದ್ದೇ ಇರುತ್ತೆ. ನಾಲ್ಕು ವರುಷಗಳಿಂದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾವಿರಾರು ಕೃಷಿಕರಿಗೆ ಕುಂಬಳಕಾಯಿ ಬಿತ್ತನೆ ಹಂಚಿ, ಶಾಲೆಯ ಮಾಸ್ತರಂತೆ ಪಾಠ ಹೇಳುವ ಗೌಡರದ್ದು ಅನುಕರಣೀಯ ಸಾಧನೆ. ಪತ್ನಿ, ಮೂರು ಮಕ್ಕಳೊಂದಿಗೆ ಸಂತೃಪ್ತ ಬದುಕು ಕಟ್ಟಿರುವ ಶಿವರಾಮೇಗೌಡರು ಇತರೇ ಕೃಷಿಕರಿಗೆ ಒಂದು ಆದರ್ಶ.
ಕೇಶವಮೂರ್ತಿ .ಎನ್

ಗ್ರಾಮೀಣ ಪ್ರದೇಶಕ್ಕೆ ಕೃಷಿ ತಂತ್ರಜ್ಞಾನ
ಕೃಷಿ ವಿಜ್ಞಾನ ಕೇಂದ್ರದ ಸಾಧನೆ

ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯಲು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಿಲ್ಲೆಗೊಂದು ಕೃಷಿ ವಿಜ್ಞಾನ ಕೇಂದ್ರವೆಂಬಂತೆ ಕೃಷಿ ಉತ್ಪಾದನೆಯ ಹೆಚ್ಚಳ ಹಾಗೂ ರೈತರ ಸಾಮಾಜಿಕ ಆರ್ಥಿಕ ಮಟ್ಟವನ್ನು ಸುಧಾರಿಸುವ ಹಿತದೃಷ್ಠಿಯಿಂದ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಫಾರಂನಲ್ಲಿ 2004ರ ಮೇ ತಿಂಗಳಿನಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಿತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಆಡಳಿತದ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಕೃಷಿ ವಿಜ್ಞಾನ ಕೇಂದ್ರವು ತನ್ನ ವ್ಯಾಪ್ತಿಗೆ ಬರುವ ನಾಲ್ಕು ತಾಲ್ಲೂಕುಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರದ ವ್ಯಾಪ್ತಿಯಲ್ಲಿ ರಾಗಿ, ಜೋಳ, ಮುಸುಕಿನ ಜೋಳ, ಭತ್ತ, ಸೂರ್ಯಕಾಂತಿ, ಶೇಂಗಾ, ಕಬ್ಬು, ಬಾಳೆ, ತೆಂಗು, ಅರಿಶಿನ ಮತ್ತು ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಕೇಂದ್ರದ ವೈಶಿಷ್ಟತೆ:
ಚಾಮರಾಜನಗರ ಜಿಲ್ಲೆಯ ಆಶಾಕಿರಣವಾದ ಈ ಕೇಂದ್ರವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿವೆ. ಕೃಷಿಕರು ಕ್ಷೇತ್ರ ಮಟ್ಟದಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನವವನ್ನು ಅಳವಡಿಸುವಾಗ ಎದುರಿಸುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಪರಿಹಾರೋಪಾಯಗಳನ್ನು ಸೂಚಿಸುವ ಹಾಗೂ ಈ ಪರಿಹಾರಗಳನ್ನು ಅಳವಡಿಸುವಂತೆ ಮನವರಿಕೆ ಮಾಡುವುದು ಕೇಂದ್ರದ ಚಟುವಟಿಕೆಗಳಲ್ಲೊಂದಾಗಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನುಭವ್ತರಬೇತಿಯ ಮುಖ್ಯ ಉದ್ದೇಶ. ಕೇಂದ್ರದಲ್ಲಿ ಬೇಸಾಯಶಾಸ್ತ್ರ, ತೋಟಗಾರಿಕೆ, ಸಸ್ಯ ಸಂರಕ್ಷಣೆ, ಗೃಹ ವಿಜ್ಞಾನ, ಪಶುವೈದ್ಯಕೀಯ ಮತ್ತು ರೇಷ್ಮೆ ಕೃಷಿತಜ್ಞರಿರುತ್ತಾರೆ. ಈ ವಿಜ್ಞಾನಿಗಳೆ ತರಬೇತುದಾರರಾಗಿರುವದರಿಂದ ಕೃಷಿಯಲ್ಲಿ ಆವಿಷ್ಕಾರಗೊಂಡಿರುವ ನವೀನ / ಸಂಶೋಧನೆಯ ತಾಂತ್ರಿಕತೆಯ ಫಲ ರೈತರನ್ನು ನೇರವಾಗಿ ತಲುಪುತ್ತದೆ ಮತ್ತು ವಿಜ್ಞಾನಿಗಳಿಂದ ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ತಕ್ಷಣ ಪಡೆಯುವರು. ಇಲ್ಲಿ ನಡೆಸುವ ತರಬೇತಿ ಕಾರ್ಯಚಾತುರ್ಯತೆಗಳನ್ನು ಕಲಿಸುವ ಹಾಗೂ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದುವಂತಹ ಪ್ರವೃತ್ತಿಯನ್ನು ಬೆಳೆಸುವುದಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ಧ್ಯೇಯೋದ್ದೇಶಗಳು:
ಸುಸ್ಥಿರ ಭೂಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಮರುಪರಿಶೀಲನೆ ನಡೆಸುವುದು.
ಕೃಷಿ ಸಂಶೋಧನೆಯ ತಂತ್ರಜ್ಞಾನಗಳ ಬಗ್ಗೆ ವಿಸ್ತರಣ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಅಧಿಕ ಉತ್ಪಾದನೆಗೆ ಮತ್ತು ಸ್ವ ಉದ್ಯೋಗಾವಕಾಶಗಳಿಗಾಗಿ ಕಾರ್ಯದಿಂದ ಕಲಿಕೆಯ ಬಗ್ಗೆ ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಉತ್ಪನ್ನ ಮಾಹಿತಿ ಪಡೆಯಲು ಹಾಗೂ ರೈತರ ಅಭಿಪ್ರಾಯ ತಿಳಿಯಲು ವಿವಿಧ ಬೆಳೆಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು.
ತಂತ್ರಜ್ಞಾನ ಮರುಪರಿಶೀಲನೆ:
ರೈತರು ಅನುಸರಿಸುತ್ತಿರುವ ಕೃಷಿ ಪದ್ದತಿಯಲ್ಲಿರುವ ಅಂದರೆ ಬೆಳೆ ಪದ್ದತಿ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಕಳೆ ನಿರ್ವಹಣೆ ಹಾಗೂ ಇತರೆ ಸಮಸ್ಯೆಗಳನ್ನು ಗುಣಾತ್ಮಕವಾಗಿ ಪರಿಶೀಲಿಸಿ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ತಂತ್ರಜ್ಞಾನವನ್ನು ರೈತರಿಗೆ ಒದಗಿಸಬಹುದಾಗಿದೆ. ಕೃಷಿ ವಿಜ್ಞಾನ ಕೇಂದ್ರದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಬೆಳೆಗಳ ಬಗ್ಗೆ ತಂತ್ರಜ್ಞಾನದ ನವೀಕರಣೆಗಾಗಿ ಕ್ಷೇತ್ರ ಸಂಶೋಧನೆಗೊಳ್ಳುವುದು.
ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ:
ಗ್ರಾಮೀಣ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಿಗೆ ಹೊಸ ತಂತ್ರಜ್ಞಾನ ಮತ್ತು ಕೌಶಲ್ಯತೆಗಳ ಬಗ್ಗೆ ತರಬೇತಿ ನೀಡುವುದು.
ವೃತ್ತಿಪರ ತರಬೇತಿ ಕಾರ್ಯಕ್ರಮ:
ರೈತರು, ರೈತ ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಲು ಬೇಕಾಗುವ ಜ್ಞಾನ ಮತ್ತು ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
ಮುಂಚೂಣಿ ಪ್ರಾತ್ಯಕ್ಷಿಕೆಗಳು:
ಪ್ರಮುಖವಾದ ಏಕದಳ ಮತ್ತು ದ್ವಿದಳ ಧಾನ್ಯಗಳೂ ಮತ್ತು ಎಣ್ಣೆಕಾಳು ಬೆಳೆಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಉತ್ಪಾದನಾ ಅಂಕಿಅಂಶಗಳ ವಿವರಗಳನ್ನು ಪಡೆಯುವುದರ ಜೊತೆಗೆ ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುವುದು. ಇದರ ಮುಖ್ಯ ಉದ್ದೇಶವೆಂದರೆ ವಿವಿಧ ವಾತಾವರಣ ಹಾಗೂ ಬೆಳೆಯ ಪರಿಸ್ಥಿತಿಗನುಗುಣವಾಗಿ ಹೊಸದಾಗಿ ಅಭಿವೃದ್ಧಿಪಡಿಸಿದ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣೆ ತಾಂತ್ರಿಕತೆ ಹಾಗೂ ಅವುಗಳ ನಿರ್ವಹಣೆ ಬಗ್ಗೆ ರೈತರ ಹೊಲ, ಗದ್ದೆ - ತೋಟಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸುವುದು.
ಕೇಂದ್ರದಲ್ಲಿರುವ ಸವಲತ್ತುಗಳು: ರೇಷ್ಮೆ ಸಾಕಾಣಿಕೆ ಘಟಕ, ಎರೆಹುಳು ತಯಾರಿಕ ಘಟಕ, ಹೈನುಗಾರಿಕೆ ಘಟಕ, ಕುರಿ ಸಾಕಾಣಿಕೆ ಘಟಕಗಳು ಇವೆ.
ಗ್ರಾಮ ಸಂಪನ್ಮೂಲ ಕೇಂದ್ರ:
ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯ ಪ್ರಗತಿಗಳು ಗ್ರಾಮೀಣ ಜನರ ನೆರವಿಗೆ ಬಂದಾಗ ಮಾತ್ರ ಅವರ ಜೀವನ ಮಟ್ಟದಲ್ಲಿ ಸುಧಾರಣೆ ಕಾಣುವ ಮೂಲಕ ರಾಷ್ಟ್ರದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಅಂತರಿಕ್ಷ ಸಹಾಯದಿಂದ ಗ್ರಾಮಮಟ್ಟದಲ್ಲಿ ಗ್ರಾಮ ಸಂಪನ್ಮೂಲ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಯತ್ನಕ್ಕೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಇಸ್ರೋ ಮುಂದಾಗಿದೆ.
ಈ ಯೋಜನೆಯಲ್ಲಿ ಹಳ್ಳಿಗಳ ಮಟ್ಟದಲ್ಲಿ ಗ್ರಾಮ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ ಉಪಗ್ರಹ ಸಂಪರ್ಕ ಕಲ್ಪಿಸುವ ಮೂಲಕ ವೀಡಿಯೋ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಕೃಷಿಕರಿಗೆ ಅತಿ ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಮಾಹಿತಿ ಪೂರೈಸಬಹುದಾಗಿದೆ.
ಬಾನುಲಿ ಕೃಷಿ ಬೆಳಗು:
ಕೇಂದ್ರದ ಸಹಯೋಗದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು. 14.9.2009ರಂದು ನಡೆದ ಕಾರ್ಯಕ್ರಮದಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀ ಶಿವಮಲ್ಲು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶ್ರೀ ಗಿರೀಶ್, ಕೇಂದ್ರ ರೇಷ್ಮೆ ಮಂಡಳಿ ಜಂಟಿ ನಿರ್ದೇಶಕ ಚಂದ್ರಶೇಖರ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಆಕಾಶವಾಣಿ ನಿಲಯ ನಿರ್ದೇಶಕಿ ಶ್ರೀಮತಿ ವಿಜಯಾಹರನ್, ಕಾರ್ಯಕ್ರಮ ನಿರ್ವಾಹಕ ಶ್ರೀ ಕೇಶವಮೂರ್ತಿ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು.





















Saturday, January 9, 2010

ನನಸಾದ ಕೃಷಿ ಕನಸು
ಶಿಕ್ಷಣ ಕ್ಷೇತ್ರದಲ್ಲೇ 5 ದಶಕಗಳಿಂದ ತೊಡಗಿಸಿಕೊಂಡಿರುವ ನಮಗೆ ಕೃಷಿಯಲ್ಲಿ ಹೇಗೆ ಆಸಕ್ತಿ ಎಂಬ ಕುತೂಹಲವನ್ನು ಅನೇಕರು ವ್ಯಕ್ತಪಡಿಸಿದ್ದಾರೆ - ಪಡಿಸುತ್ತಿದ್ದಾರೆ. ಇದರ ಹಿನ್ನೆಲೆ ಹೀಗಿದೆ:
60 ವರ್ಷಗಳ ಹಿಂದೆ ನಾನಿನ್ನೂ ಮಿಡ್ಲ್ ಸ್ಕೂಲ್ ಓದುತ್ತಿದ್ದ ಕಾಲ. ನಮ್ಮ ತಾತ (ತಾಯಿ ತಂದೆ) ನವರ ಗದ್ದೆಗಳು ಕೆಸ್ತೂರು - ನಿಡಘಟ್ಟಗಳಲ್ಲಿತ್ತು. ಪ್ರತೀವರ್ಷ ನಮ್ಮ ರೈತರು (ಈಟಿ ಗೌಡ ಮತ್ತು ತಮ್ಮಯ್ಯ) ಗಾಡಿಗಳಲ್ಲಿ ಭತ್ತ ತುಂಬಿಕೊಂಡು ಮೈಸೂರಿನಲ್ಲಿರುವ ಮನೆಗೆ ತರುತ್ತಿದ್ದರು. ಈ ದಿನದ ಹಿನ್ನಾಮುನ್ನಾ ಸಡಗರ ಅವರ್ಣನೀಯ. ಸುಮಾರು 15 ದಿನಗಳ ಮುಂಚೆಯೆ ಪೆಟ್ಟೆ (ಬಿದಿರನ ಚಾಪೆಯ ರೀತಿ) ತರುವುದು - ಅದನ್ನು ಸಗಣಿಯಲ್ಲಿ ಸಾರಿಸಿ ನೆರಳಿನಲ್ಲಿ ಒಣಗಿಸುವುದು, ನಂತರ ಮನೆಯ ಒಂದು ಮೂಲೆಯಲ್ಲಿ ಡ್ರಮ್ಮಿನಾಕಾರದಲ್ಲಿ (ಸುರುಳಿ ಆಕಾರ) ಕಟ್ಟಿ ದಬ್ಬಳ ಮತ್ತು ಸುತ್ತಲಿಯಿಂದ ತೆರೆದ ಅಂಚನ್ನು ಭದ್ರವಾಗಿ ಹೊಲೆಯುವುದು. ತಳಭಾಗಕ್ಕೆ ಸಂದು ಬಿಡದಂತೆ ಕೆಮ್ಮಣ್ಣು ಸಗಣಿಯಿಂದ ಮೆತ್ತಿ ಪೆಟ್ಟೆಯ ಒಳಗೆ ಧೂಪವನ್ನು ಹಾಕುವುದು. ನಂತರ ತಳಕ್ಕೆ ಬೇವಿನ ಸೊಪ್ಪನ್ನು ಹಾಕಿ ಮೇಲೆ ತೆಳುವಾದ ಗೋಣಿಚೀಲ ಹೊದಿಸುವುದು. ಇಷ್ಟಾದರೆ ಭತ್ತ ತುಂಬಿಸಲು ಪೆಟ್ಟೆ ಸಿದ್ಧ. ಸಾಮಾನ್ಯವಾಗಿ ಭತ್ತದ ಗಾಡಿಗಳು ಬೆಳಗಿನ ಜಾವ 5 ರಿಂದ 6 ಗಂಟೆ ಹೊತ್ತಿಗೆ ಬರುತ್ತಿದ್ದವು. ಮನೆಯವರೆಲ್ಲಾ ಬೆಳಿಗ್ಗೆ 4 ಗಂಟೆಗೆ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿರುತ್ತಿದ್ದೆವು. ನಾವು (ಮಕ್ಕಳು) ಗಾಡಿಗಳನ್ನು ಕಂಡತಕ್ಷಣ ನಮ್ಮ ಸಂಭ್ರಮ ಹೇಳತೀರದು. ದೂರದವರೆಗೆ ಓಡಿ ಗಾಡಿಗಳನ್ನು ಸ್ವಾಗತಿಸಿ, ಜೊತೆಯಲ್ಲಿ ನಡೆದುಬರುತ್ತಿದ್ದೆವು. ಎತ್ತುಗಳನ್ನು ಬಿಚ್ಚಿ ಹುಲ್ಲು ನೀರನ್ನು ಕೊಟ್ಟ ನಂತರ ಈಟಿ ಗೌಡ ಮತ್ತು ತಮ್ಮಯ್ಯ ಒಳಬರುತ್ತಿದ್ದರು. ಮನೆಯ ಮುಂದಿನ ಭಾವಿಯಲ್ಲಿ ನೀರು ಸೇದಿ ಮುಖ ಕೈಕಾಲು ತೊಳೆದುಕೊಳ್ಳುತ್ತಿದ್ದರು. ಅವರಿಗೆ ದೊಡ್ಡ ಲೋಟಗಳಲ್ಲಿ (1/2 ಲೀಟರ್ಗಿಂತ ಹೆಚ್ಚಿರಬಹುದು) ಕಾಫಿ ಕೊಡಲಾಗುತ್ತಿತ್ತು. ಮನೆಯ ಹಿರಿಯರ ಜೊತೆ ಯೋಗಕ್ಷೇಮ ವಿಚಾರ ನಂತರ ಎಲ್ಲರೂ ಸೇರಿ ಪೆಟ್ಟೆಗಳನ್ನು ತುಂಬಿಸುತ್ತಿದ್ದೆವು. ಸುಮಾರು 2-3 ಗಂಟೆಗಳು ಬೇಕಾಗುತ್ತಿತ್ತು. ನಂತರ ನಮ್ಮ ರೈತರು ಸ್ನಾನ ಮಾಡಿ ತಿಂಡಿ (ದಪ್ಪ ದೋಸೆಗಳು ಅವರಿಗೆ ಇಷ್ಟ) ತಿಂದು ಹಜಾರದಲ್ಲಿ 1 ಗಂಟೆ ಮಲಗುತ್ತಿದ್ದರು. ನಂತರ ಎದ್ದು ಎತ್ತುಗಳ ಆರೈಕೆ ಮಾಡಿ ಸುತ್ತಾಡಿಕೊಂಡು ಬರುತ್ತಿದ್ದರು.
ಸುಮಾರು ಮಧ್ಯಾಹ್ನ 1 ಗಂಟೆ ವೇಳೆಗೆ ವಿಶೇಷ ಊಟ ಸಿದ್ಧವಾಗುತ್ತಿತ್ತು. ರೈತರನ್ನು ಮೊದಲು ಊಟಕ್ಕೆ ಕೂರಿಸುತ್ತಿದ್ದರು. ದೊಡ್ಡ ಬಾಳೆ ಎಲೆಗಳು, ಸುತ್ತ ರಂಗೋಲಿ, ಮುಂದೆ ಹಣತೆ ದೀಪಗಳನ್ನು ಹಚ್ಚಿರುತ್ತಿದ್ದರು. ಅಡಿಗೆ ಬಡಿಸಿದ ನಂತರ ದೇವರ ಪೂಜೆ ಮಾಡಿ ತೀರ್ಥ ಕೊಡುತ್ತಿದ್ದರು. ನಮ್ಮ ಅಜ್ಜಿ ತಾತ ಆದಿಯಾಗಿ ಎಲ್ಲರೂ ಅನ್ನದಾತ ಸುಖೀಭವ ಎಂದು ಹೇಳಿಕೊಂಡು ದೀರ್ಘದಂಡ ನಮಸ್ಕಾರ ಮಾಡುತ್ತಿದ್ದೆವು. ಅವರ ಊಟವಾದ ನಂತರ ನಾವುಗಳು (ಚಿಕ್ಕವರು) ರೈತರ ಎಲೆಗಳನ್ನು ಎತ್ತಿ ಸಾರಿಸುತ್ತಿದ್ದೆವು. ಸಾಯಂಕಾಲದ ಹೊತ್ತಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಿಕೊಡುತ್ತಿದ್ದೆವು. ಬಹುಶ: ಈ ವಿಧಿಗಳು ನನ್ನಲ್ಲಿ ರೈತನಾಗುವ ಆಸೆಗೆ ಪ್ರೇರಿತವಾಗಿರಬೇಕು.
ನನ್ನ ಕಾಲೇಜು ವಿದ್ಯಾಭ್ಯಾಸ ಎಲ್ಲಾ ಮುಗಿಯುವ ವೇಳೆಗೆ ನಮ್ಮ ಅಜ್ಜ ಜಮೀನುಗಳನ್ನೆಲ್ಲಾ ಮಾರಿ ಪೂರ್ಣ ಪಟ್ಟಣವಾಸಿಗಳಾಗಿದ್ದೆವು.
ವರುಷಗಳು ಉರುಳಿದವು. 1970ರಲ್ಲಿ ಕುಮಾರಿ ಶಕುಂತಳರಾವ್ ಅವರ ಜತೆ ವಿವಾಹವಾಯಿತು. ಆಕೆ ಎಂ ಎ ಪದವೀಧರೆ. ಮಹಾರಾಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ನಾನು ಹೈಸ್ಕೂಲ್ ಶಿಕ್ಷಖನಾಗಿದ್ದೆ. ಇಬ್ಬರೂ ಕೆಲಸವನ್ನು ಬಿಟ್ಟು ನಮ್ಮ ಸ್ವಂತ ವಿದ್ಯಾಸಂಸ್ಥೆ ಶ್ರೀ ರಾವ್ ಟ್ಯುಟೋರಿಯಲ್ಸ್ ಸ್ಥಾಪಿಸಿದೆವು. ಆಕೆಯ ಶ್ರಮ, ಚೈತನ್ಯ ಆರ್ಥಿಕವಾಗಿ ಸುಧಾರಿಸಿದೆವು. ಆಗ ನನ್ನ ಚಿಕ್ಕಂದಿನ ಆಸೆ - ಜಮೀನು ಕೊಳ್ಳುವುದು ಪುನ: ಗರಿಕೆದರಿತು. ನನ್ನ ಶ್ರೀಮತಿಯವರೂ ಬಾಲ್ಯದಲ್ಲಿ ಹಳ್ಳಿಗಳಲ್ಲಿ ಬೆಳೆದವರು. ಅವರ ತಾಯಿತಂದೆಯ ಕಡೆಯವರು ಕೃಷಿಕರಾಗಿದ್ದವರು. ಆಕೆಗೆ ಕೃಷಿ ವಿಧಾನಗಳು ಚೆನ್ನಾಗಿ ಗೊತ್ತಿತ್ತು. ಇಬ್ಬರ ಆಸೆಯೂ ಅದೇ ಆಗಿತ್ತು.
1980ರಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ನಾಲ್ಕೂವರೆ ಎಕರೆ ಭೂಮಿ ಕೊಂಡೆವು. ಕೆಲವು ವರ್ಷಗಳ ತನಕ ರೂಢಿಸಲಾಗಲಿಲ್ಲ. ನನ್ನ ಶ್ರೀಮತಿಯವರು ಮೂಲ ಜನತಾಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದರು. 10 ವರ್ಷಗಳ ಕಾಲ ಮೈಸೂರು ನಗರ ಪಾಲಿಕೆ ಸದಸ್ಯೆ ಆಗಿದ್ದರು. ನಾನು ವಿದ್ಯಾಸಂಸ್ಥೆಯ ಕಡೆಗೆ ಹೆಚ್ಚು ಗಮನ ಸಮಯ ಕೊಡಬೇಕಾಯಿತು.
1990ರಿಂದ ತೀವ್ರಗತಿಯಲ್ಲಿ ಜಮೀನು ಅಭಿವೃದ್ಧಿಪಡಿಸಿದೆವು. ಪ್ರಾರಂಭದಿಂದಲೂ ಪೂರ್ಣ ಸಾವಯವ ಪದ್ದತಿಯನ್ನೇ ಅನುಸರಿಸುತ್ತಾ ಬಂದಿದ್ದೇವೆ. ಕಾರಣ ನಾನು 1960ರಲ್ಲಿ ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುವ ಅಪಾಯಗಳು ಎಂಬ ಲೇಖನ. ಈ ವಿಜ್ಞಾನಿ ಲೇಖಕನ ಅಂದಾಜಿನಂತೆ ರಾಸಾಯನಿಕ ಗೊಬ್ಬರಗಳ ಬಳಕೆ ಮುಂದುವರಿದಲ್ಲಿ 100 ವರ್ಷಗಳ ಒಳಗೆ ಭೂಮಿ ಪೂರ್ಣ ಬರಡಾಗುವುದು. ಜೊತೆಗೆ ಸಾವಯವ ಕೃಷಿಯಲ್ಲಿ ಆಗಲೇ ಪಳಗಿದ್ದ ಮಿತ್ರರಾದ ಶ್ರೀ ಎ ಪಿ ಚಂದ್ರಶೇಖರ್ ಮತ್ತು ಶ್ರೀ ರಮೇಶ್ ಕಿಕ್ಕೇರಿಯವರ ಪ್ರೋತ್ಸಾಹ ಬೆಂಬಲ ಸಹಕಾರಿಯಾದವು.
3 ವರ್ಷಗಳ ಹಿಂದೆ ನಮ್ಮ ಜಮೀನು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ವಶ ಪಡಿಸಿಕೊಳ್ಳಲಾಯಿತು
. 120 ತೆಂಗಿನ ಮರಗಳು, 20 ಮಾವಿನ ಮರಗಳು ಎಲ್ಲಾ ಬಗೆಯ ಹಣ್ಣಿನ ಮರಗಳು (1-2 ಮಾತ್ರ), 200ಕ್ಕೂ ಹೆಚ್ಚು ತೇಗದ ಮರಗಳು, ಗ್ರಾಮೀಣ ಮಾದರಿ ಮನೆ ಎಲ್ಲಾ ಇದ್ದವು. ಅಂತರ ಬೆಳೆಯಾಗಿ ಬಾಳೆ ಬೆಳೆಯುತ್ತಿದ್ದೆವು. ಆಹಾರ ಧಾನ್ಯಗಳನ್ನು ಬೆಳೆಯುತ್ತಿರಲಿಲ್ಲ.
2006ರ ಮಾರ್ಚ್ ನಲ್ಲಿ ಈಗಿರುವ ನಂಜನಗೂಡು ಸಮೀಪದ ಚಿನ್ನದಗುಡಿಹುಂಡಿ ಜಮೀನನ್ನು ಕೊಂಡುಕೊಂಡೆವು. ಜಮೀನಿನ ವಿಸ್ತೀರ್ಣ 8 ಎಕರೆ. ನಂಜನಗೂಡು - ಚಾಮರಾಜನಗರ ಮುಖ್ಯ ರಸ್ತೆಯ ಪಕ್ಕದಲ್ಲಿ ಚಿನ್ನದಗುಡಿಹುಂಡಿ ರೈಲ್ವೆ ನಿಲ್ದಾಣದ ಎದುರು ಇದೆ. ಕೊಳ್ಳುವಾಗಲೇ ಸುತ್ತಲೂ ಜೀವಂತ ಬೇಲಿ ಮತ್ತು ಕೊಳವೆ ಬಾವಿ ಇತ್ತು. ಸುಮಾರು 300 ಅಡಿಕೆ ಮರಗಳಿತ್ತು. ಅಷ್ಟು ಉತ್ತಮವಾಗಿರಲಿಲ್ಲ. ಅವುಗಳನ್ನು ತೆಗೆದು ಕೃಷಿ ಮತ್ತು ತೋಟಕ್ಕೆ ಭೂಮಿಯನ್ನು ಸಿದ್ಧಪಡಿಸಲಾಯಿತು.
2006 ಡಿಸೆಂಬರ್ ನಮ್ಮ ಕುಟುಂಬಕ್ಕೆ ಉತ್ತಯಂತ ದುಖ:ದ ದಿನ. ಶ್ರೀಮತಿ ಶಕುಂತಲಾರಾವ್ (ನನ್ನ ಸರ್ವಸ್ವ) ಚಿರಶಾಂತಿ ಪಡೆದರು. ಅವರ ಸ್ಮರಣಾರ್ಥ 2 ಪ್ರತಿಷ್ಠಾನಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಒಂದು :ಶಕುಂತಲಾರಾವ್ ಸ್ಮಾರಕ ಕೃಷಿ ಉತ್ಥಾನ ಪ್ರತಿಷ್ಠಾನ.ಟ್ರಸ್ಟಿನ ಮುಖ್ಯ ಉದ್ದೇಶ ನಮ್ಮ ಪೂರ್ವಜರು ಸಾಧಿಸಿದ ಸುಸ್ಥಿರ ವ್ಯವಸಾಯ ಪದ್ದತಿಗಳನ್ನು (ಸಾವಯವ / ನೈಸರ್ಗಿಕ ) ಪುನ: ಜಾರಿಗೆ ತರುವುದು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಟ್ರಸ್ಟಿನ ಕಾರ್ಯಕ್ರಮಗಳು (ಪ್ರಾತ್ಯಕ್ಷಿಕೆಗಳೂ ಸೇರಿ) ಸಸ್ಯಶಾಮಲ ತೋಟದಲ್ಲಿ ನಡೆಸಲಾಗುತ್ತಿದೆ. 100 ಜನರು ಕೂಡಬಹುದಾದ ಸಭಾಮಂಟಪ ಕುಡಿಯುವ ನೀರಿನ ಸೌಕರ್ಯವಿದೆ.
ಟ್ರಸ್ಟಿನ ಉದ್ಘಾಟನೆಯನ್ನು ಕರ್ನಾಟಕ ಸಾವಯವ ಕೃಷಿ ಆಯೋಗದ ಅಧ್ಯಕ್ಷರಾದ ಶ್ರೀ ಎ ಎಸ್ ಆನಂದ್ ರವರು 9.11.2008ರಂದು ನೆರವೇರಿಸಿದರು. ಶ್ರೀ ಆರ್ ಬಾಲಸುಬ್ರಹ್ಮಣ್ಯಂ, ಸಂಸ್ಥಾಪಕರು, ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು ಮತ್ತು ಶ್ರೀ ವಿಷಕಂಠ, ಜಂಟಿ ಕೃಷಿ ನಿರ್ದೇಶಕ ಅತಿಥಿಗಳಾಗಿ ಆಗಮಿಸಿ ಮಾರ್ಗದರ್ಶನ ಮಾಡಿದರು.
31.5.2009ರಂದು ಆರೋಗ್ಯಕ್ಕೆ ತೃಣ ಧಾನ್ಯಗಳು ಕಾರ್ಯಗಾರ ವನ್ನು ಎನ್ ಐ ಇ ಮೈಸೂರು ಸಭಾಂಗಣದಲ್ಲಿ ಎನ್ ಐ ಇ ಮತ್ತು ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಸಹಕಾರದಿಂದ ನಡೆಸಲಾಯಿತು. ಡಾ: ರಮಾ ಕೆ ನಾಯಕ್, ಡೀನ್, ಕೃಷಿ ವಿಶ್ವವಿದ್ಯಾಲಯ, ಧಾರವಾಡ ನಡೆಸಿಕೊಟ್ಟರು. ಡಾ: ಸಿ ದೊರೆಸ್ವಾಮಿ, ಜಂಟಿ ನಿರ್ದೇಶಕರು , ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ ಮುಖ್ಯ ಅತಿಥಿಗಳಾಗಿದ್ದರು.
ಸಸ್ಯಶಾಮಲ ತೋಟವನ್ನು ಸಾವಯವ ಕೃಷಿಯ ಮಾದರಿ ಶೈಕ್ಷಣಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಮಾದರಿ ಸಣ್ಣ ಮನೆಗಳು, ಕೊಟ್ಟಿಗೆ ಕಟ್ಟಲಾಗಿದೆ. ನಾಡಹಸುಗಳನ್ನು ಸಾಕಲಾಗಿದೆ. ಸಭಾಮಂಟಪ, ಎರೆಹುಳು ತೊಟ್ಟಿ, ಕೃಷಿ ಹೊಂಡ (ಶ್ರೀ ತಿಮ್ಮರಾಜು, ಕೃಷಿ ಅಧಿಕಾರಿ, ಜಲಾನಯನ ಇಲಾಖೆ, ನಂಜನಗೂಡು ಇವರ ಸಹಕಾರ) ನಿರ್ಮಿಸ ಲಾಗಿದೆ .
ತಾ: 26.10.2009 ಸೋಮವಾರ ಸಸ್ಯ ಶಾಮಲ ದಲ್ಲಿ ಬಾನುಲಿ ಬೆಳಗು ಕೃಷಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ ಸಂಘಟಿಕರಿಗೆ ಧನ್ಯವಾದಗಳು.
-ಎಂ ಶ್ರೀಪಾದರಾವ್














Wednesday, January 6, 2010

ಸುಸ್ಥಿರ ಕೃಷಿ ಶಿಖರ ಶಿವಣ್ಣಗೌಡ

ಶಿವಣ್ಣಗೌಡರು ಮಿತ ಭಾಷಿ, ಮೃದು ಭಾಷಿ. ಮೈಸೂರು ಆಕಾಶವಾಣಿಯ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜಮೀನಿನಲ್ಲೂ ಇಂತಹ ಕಾರ್ಯಕ್ರಮ ಮಾಡಿ ತಾನು ಮಾಡುತ್ತಿರುವ ಸುಸ್ಥಿರ ಬೇಸಾಯ ವಿಧಾನಗಳನ್ನು ಇತರ ರೈತರಿಗೆ ಪರಿಚಯಿಸುವ ಮಹದೋದ್ದೇಶ ಹೊತ್ತು ನನ್ನ ಬಳಿ ಬಂದಿದ್ದರು. ಅವರ ಮಾತು, ಸರಳ ಚಿಂತನೆ, ಕಾರ್ಯ ತತ್ಪರತೆ ಕಂಡು ನಾನೂ ಬೆರಗಾದೆ. ವ್ಯವಸಾಯದ ಮೂಲ ಉದ್ದೇಶವಾದರೂ ಏನು? ರೈತ ತನ್ನ ಜಮೀನಿನಲ್ಲಿ ತನಗೆ ಬೇಕಾದುದನ್ನೆಲ್ಲಾ ಬೆಳೆಯುವುದು ತಾನೆ? ಇದೇ 'ಸುಸ್ಥಿರ ಕೃಷಿ'. ತನಗೆ ಬೇಕಾದ್ದನ್ನೆಲ್ಲಾ ಬೆಳೆದು, ಮಾರುಕಟ್ಟೆಗಾಗಿ, ಆರ್ಥಿಕ ಸಬಲತೆಗಾಗಿ ಒಂದೆರಡು ವಾಣಿಜ್ಯ ಬೆಳೆ ಬೆಳೆದ್ರೆ ಮಾರುಕಟ್ಟೆ ಏರಿಳಿತಗಳು ರೈತನನ್ನು ಭಾಧಿಸೋಲ್ಲ. ವ್ಯವಸಾಯದ ಸುಸ್ಥಿರತೆಗೆ ಮಿಶ್ರ ಬೇಸಾಯದ ಚಿಂತನೆ ಸಹಕಾರಿ. ಶಿವಣ್ಣಗೌಡರೂ ಸಹ ಮಾಡುತ್ತಿರುವುದು ಇದನ್ನೇ. ಇವರ ಒಟ್ಟು ಕುಟುಂಬಕ್ಕಿರುವ ಜಮೀನು, ಆರು ಎಕರೆ ನೀರಾವರಿ ಹಾಗೂ 4 ಎಕರೆ ಖುಷ್ಕಿ ಮಾತ್ರ. ಇದರಲ್ಲಿ ಹತ್ತು ಜನರ ಜೀವನ ಸಾಗಬೇಕು. ಶಿವಣ್ಣಗೌಡರು ಜಮೀನಿನಲ್ಲಿ ಪೋಷಿಸಿರುವ ಜೀವ ವೈವಿಧ್ಯವಾದರೂ ಎಂತಹುದು. ಒಂದು ಜತೆ ಎತ್ತು, ಮೂರು ಸೀಮೆ ಹಸು, ಮೂರು ಎಮ್ಮೆ, ಒಂದು ನಾಟಿ ಹಸು, ಹತ್ತಾರು ಕುರಿ, ನಾಟಿ ಕೋಳಿಗಳು, ಗೊಬ್ಬರಕ್ಕಾಗಿ ಎರೆಹುಳು ಸಾಕಣೆ, ಖುಷ್ಕಿಯಲ್ಲಿ ರಾಗಿ, ತೊಗರಿ, ಎಳ್ಳು, ಹರಳು, ಹುರುಳಿ, ಅಲಸಂದೆ, ಹಸಿಕಡಲೆ, ಅವರೆ, ಹುಚ್ಚೆಳ್ಳು, ಬಗೆಬಗೆಯ ಸೊಪ್ಪು, ತರಕಾರಿಗಳು, ನೀರಾವರಿಯಲ್ಲಿ ನಾಲ್ಕು ಎಕರೆ ಕಬ್ಬು, ಎರಡು ಎಕರೆ ಭತ್ತ, ಮನೆಗೆ ಬೇಕಾದ ಎಲ್ಲ ಜಾತಿಯ ಮರಗಿಡಗಳು, ಹೆಸರಿಸುವುದಾದರೆ 22 ಆಲ, 30 ಹೊಂಗೆ, 700 ಅಕೇಶಿಯ, 50 ತೆಂಗು, 70 ತೇಗ, 16 ಸಿಲ್ವರ್, 20 ಸವರ್ೆ ಮರ, 25 ಬೇವಿನ ಮರಗಳು, 60 ನೀಲಗಿರಿ, 10 ಬುಗರಿ ಮರ, 5 ಜಂಬುನೇರಳೆ ಮರ, 6 ಅಡಿಕೆ, 2 ಬಾಗೆ, 2 ಗೊಬ್ಬಳಿ, 5 ಬಿದಿರು ಮೆಳೆ, 2 ಮರ ಹತ್ತಿ, ಒಂದು ಬಸಲಿ ಮರ, 3 ಹಲಸು, 3 ಮಾವು, 2 ಸಪೋಟ, 5 ಹುಣಸೆ, ಒಂದು ಸೀಗೆ ಮೆಳೆ, 4 ಪಪ್ಪಾಯ, 20 ಬಾಳೆ ಗಿಡಗಳು, 2 ಅರಳಿ, 6ನೀರಂಜ ಒಟ್ಟು 775 ಮರಗಿಡಗಳು ಇವರ ಸುಸ್ಥಿರ ಕೃಷಿ ಬದುಕಿಗೆ ಸಾಕ್ಷಿಯಾಗಿ ನಿಂತಿವೆ. ಇದಲ್ಲವಾ ಬೆಳೆ ವೈವಿಧ್ಯತೆ. ಬರೀ ಭತ್ತ, ಕಬ್ಬು ಬೆಳೆಯುವ ಮಂಡ್ಯದಲ್ಲಿ ಶಿವಣ್ಣಗೌಡರು ವಿಭಿನ್ನವಾಗಿ ನಿಲ್ಲುತ್ತಾರೆ. ಹೆಚ್ಚು ಆಪ್ತರಾಗುತ್ತಾರೆ. ನೆಲಮುಟ್ಟಿ ದುಡಿಯುವ ಗೌಡರ ವ್ಯಕ್ತಿತ್ವ ಇಷ್ಟವಾಗುತ್ತೆ.
ಕಬ್ಬಿನ ಬೇಸಾಯದಲ್ಲಿ ಹೊಸ ಪ್ರಯೋಗಗಳನ್ನು ಶಿವಣ್ಣಗೌಡರು ಮಾಡಿದ್ದಾರೆ. ಹಿಂಗಾರಿನಲ್ಲಿ ಕಬ್ಬಿನೊಳಗೆ ಹಸಿಕಡಲೆ ಬೆಳೆದು ಯಶಸ್ವಿಯಾಗಿದ್ದಾರೆ. ಕಬ್ಬಿನ ತರಗು ಸುಡದೆ, ಕತಾಳೆ ಕಬ್ಬಿನ ಬೇಸಾಯ ಮಾಡಿದ್ದಾರೆ. ರಾಸಾಯನಿಕಗಳ ಬಳಕೆ ಮಿತಗೊಳಿಸಿದ್ದಾರೆ. 60 ರಿಂದ 65 ಟನ್ ಸರಾಸರಿ ಇಳುವರಿ ಪಡೆಯುತ್ತಿದ್ದಾರೆ.
ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳಿ ಸಾವಯವ ಬೇಸಾಯದತ್ತ ವಾಲಿರುವ ಶಿವಣ್ಣಗೌಡರು ಈಗ ಒಂದು ಎಕರೇಲಿ ಸಾವಯವ ಬೇಸಾಯ ವಿಧಾನದಲ್ಲಿ ನಾಟಿತಳಿ 'ರತ್ನಚೂಡಿ' ಭತ್ತವನ್ನು ಬೆಳೆದಿದ್ದಾರೆ. ಜಮೀನಿಗೆ ಹಟ್ಟಿಗೊಬ್ಬರ, ಎರೆಗೊಬ್ಬರ ಹಾಕಿ, ಹಸಿರೆಲೆ ಗೊಬ್ಬರವನ್ನೂ ಹಾಕಿ, ಸ್ಥಳೀಯ ತಳಿ 'ರತ್ನಚೂಡಿ' ಭತ್ತವನ್ನು ಒಟ್ಲು ಹಾಕಿ, ಸಸಿ ಏಳಿಸಿಕೊಂಡು ನಾಟಿ ಮಾಡಿದಾಗ ಗೌಡರಿಗೆ ತೊಂದರೆಕೊಟ್ಟಿದ್ದು ಭತ್ತದ ಸುಳಿಕೊರಕ ಕೀಟ.
ಸಾವಯವದಲ್ಲಿ ಭತ್ತ ಬೆಳೀತಿರೋರು ಕೀಟನಾಶಕ ಬಳಸುವಂತಿಲ್ಲ. ಬೇವಿನ ಕಷಾಯಕ್ಕೆ ಕೀಟ ಬಗ್ಗುತ್ತಿಲ್ಲ. ಆಗ ಮಂಡ್ಯದ ಪರತಂತ್ರಜೀವಿ ಪ್ರಯೋಗಾಲಯಕ್ಕೆ ಹೋಗಿ ಅಲ್ಲಿಂದ ಭತ್ತದ ಕಾಂಡಕೊರಕ ಕೀಟಕ್ಕೆ ಪರಭಕ್ಷಕ ಕೀಟಗಳನ್ನು ತಂದು, ಭತ್ತದ ಗದ್ದೆಯಲ್ಲಿ ಮೂರು ಬಾರಿ ಬಿಟ್ಟು, ಸುಳಿಕೊರಕ ಕೀಟವನ್ನು ನಿಯಂತ್ರಿಸಿದ್ದಾರೆ. ಸಮಗ್ರ ಪೀಡೆ ನಿರ್ವಹಣೆ ಕಲೆಯನ್ನು ಶಿವಣ್ಣಗೌಡರು ಕರಗತ ಮಾಡಿಕೊಂಡಿದ್ದಾರೆ. ಸಾವಯವ ಬೇಸಾಯದಲ್ಲಿ ಭತ್ತ ಬೆಳೆದ್ರೆ ಜಳ್ಳು ಕಡಿಮೆ, ಅಕ್ಕಿಯ ಇಳುವರಿ ಜಾಸ್ತಿ, ರುಚಿಯೂ ಸೊಗಸು ಅನ್ನುವುದು ಶಿವಣ್ಣಗೌಡರ ವಿಚಾರ.





ತಂದೆ ದೊಡ್ಡಕರಿಗೌಡ ಹಾಗೂ ತಾಯಿ ಮಾದಮ್ಮನವರನ್ನು ಕಂಡರೆ ಶಿವಣ್ಣಗೌಡರಿಗೆ ಬಲು ಪ್ರೀತಿ. ತಂದೆ ಕರಿಗೌಡರು ಎತ್ತುಗಳನ್ನು ಪ್ರೀತಿಯಿಂದ ಸಾಕಿರುವುದನ್ನು ಹೆಮ್ಮೆಯಿಂದ ಹೇಳ್ತಾರೆ. ಎತ್ತನ್ನ ಎಲ್ಲೋ ಕೊಟ್ಟಿಗೇಲಿ ಕಟ್ಟಿ ನಾವಿಲ್ಲಿ ಹಾಸಿಗೇಲಿ ಸುಖವಾಗಿ ಮಗಲಬಾರದು. ಅವೂ ನಮ್ಮ ಜತೇನೇ ಇರಬೇಕು ಅಂತ ತಂದೆ ಹೇಳ್ತಿರ್ತಾರೆ. ಹಾಗೇ ಅವರೂ ಸಹ. ತಮ್ಮ ಜತೆಯಲ್ಲಿಯೇ ರಾತ್ರಿಯ ವೇಳೆ ರಾಸುಗಳನ್ನು ಇಟ್ಟುಕೊಂಡಿರ್ತಾರೆ ಅಂತ ಅಭಿಮಾನಪೂರ್ವಕವಾಗಿ ನುಡಿಯುತ್ತಾರೆ. ಇಳಿ ವಯಸ್ಸಿನಲ್ಲೂ ಜಮೀನಿಗೆ ಬಂದು ಕೆಲಸ ಮಾಡುವ ತಾಯಿ ಮಾದಮ್ಮನವರನ್ನು ಕಂಡರೆ ಗೌಡರಿಗೆ ಅಕ್ಕರೆ. ಶಿವಣ್ಣಗೌಡರ ಜತೆ ಜೋಡೆತ್ತಿನ ಸಂಸಾರದ ನೊಗಕ್ಕೆ ಹೆಗಲುಕೊಟ್ಟಿರುವುದು ಪತ್ನಿ ಪ್ರಭಾವತಿ. ಪ್ರಭಾವತಿ ಅವರೂ ಗಂಡನ ಜತೆಜತೆಗೇ ದುಡಿದು ಕುಟುಂಬ ಕಟ್ಟಿದ್ದಾರೆ. ಅಣ್ಣ, ಅತ್ತಿಗೆ, ಅವರ ಎರಡು ಮಕ್ಕಳು, ತಮ್ಮ ಎರಡು ಮಕ್ಕಳು, ತಂದೆ ತಾಯಿ ಜತೆಗೂಡಿದ ಕೂಡು ಕುಟುಂಬ ಶಿವಣ್ಣ ಗೌಡರದ್ದು. ವ್ಯವಸಾಯಕ್ಕೆ ಒಟ್ಟು ಕುಟುಂಬಗಳು ಪೂರಕ ಎನ್ನುವ ಮಾತನ್ನು ಶಿವಣ್ಣಗೌಡರಂತಹ ಕುಟುಂಬ ನೋಡಿಯೇ ಹೇಳಿರಬೇಕು.
ಮಕ್ಕಳಲ್ಲಿ ವ್ಯವಸಾಯದ ಬಗೆಗಿನ ಪ್ರೀತಿಯನ್ನೂ ಈಗಿನಿಂದಲೇ ತುಂಬುತ್ತಿದ್ದಾರೆ ಗೌಡರು. ರಜಾದಿನಗಳಲ್ಲಿ ಮಕ್ಕಳನ್ನೂ ಸಹ ಜಮೀನಿಗೆ ದುಡಿಯಲು ಕರೆದುಕೊಂಡು ಹೋಗ್ತಾರೆ ಗೌಡರು. ಎರೆಹುಳು ಸಾಕಣೆ, ಕೊಟ್ಟಿಗೆ ನಿರ್ವಹಣೆಯಲ್ಲಿ ಮಕ್ಕಳ ಪಾಲುಂಟು.
'ತೊಗರಿ ಬೇಸಾಯ' ಗೌಡರ ಅಚ್ಚುಮೆಚ್ಚಿನ ಆರಂಭ. ತೊಗರಿಯಲ್ಲಿ ಕೂಳೆ ಬೆಳೆದೂ ಸಹ ಶಿವಣ್ಣಗೌಡರು ಯಶಸ್ವಿಯಾಗಿದ್ದಾರೆ.
ಬಿಆರ್ಜಿ - 1, ಬಿಆರ್ಜಿ-2, ಹೈದರಾಬಾದ್ 3 ಸಿ ತೊಗರಿ ತಳಿಯನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಅಧಿಕ ಇಳುವರಿ ಪಡೆದಿದ್ದಾರೆ. ತೊಗರಿಯನ್ನು ಬೇಳೆ ಮಾಡಿ ಮಾರುವ ಇರಾದೆ ಗೌಡರಿಗಿದೆ.ಶಿವಣ್ಣಗೌಡರದ್ದು ಸಂತೃಪ್ತ ಕೃಷಿ ಬದುಕು. ತನಗೆ ಬೇಕಾದ್ದನ್ನು ಎಲ್ಲವನ್ನೂ ತಾನು ಬೆಳೆಯುತ್ತಿದ್ದೇನೆಂಬ ಹೆಮ್ಮೆ ಶಿವಣ್ಣಗೌಡರಿಗಿದೆ. ವ್ಯವಸಾಯದಲ್ಲಿ ತೃಪ್ತಿ, ನೆಮ್ಮದಿ ಕಂಡಿದ್ದಾರೆ. ಈ ರೀತಿಯ ಸಂತೃಪ್ತಿ ಎಷ್ಟು ಜನ ರೈತರಿಗಿದೆ! ಸಂತೃಪ್ತ, ಸುಸ್ಥಿರ ಕೃಷಿಗೆ ಶಿಖರಪ್ರಾಯವಾಗಿರುವ ಶಿವಣ್ಣಗೌಡರ ಕೃಷಿ ಬದುಕಿನಿಂದ ಇತರರು ಕಲಿಯುವುದು ಬಹಳ ಇದೆ. ಕೃಷಿಯಲ್ಲಿ ಸಾಧಿಸುವವನಿಗೆ ಶಿವಣ್ಣಗೌಡರು ಆದರ್ಶ ಆಗಬಲ್ಲರು ಎಂಬುದು ನನ್ನ ಅನಿಸಿಕೆ. ನಮಸ್ಕಾರ !
ಲೇಖನ - ಎನ್ .ಕೇಶವಮೂರ್ತಿ
ಪ್ರಸಾರ ನಿವಾಹಕರು (ಕೃಷಿ)
ಆಕಾಶವಾಣಿ, ಮೈಸೂರು

ಸಾಧಕರಿಗೆ ಸನ್ಮಾನ - ಬಹುಮಾನ ವಿತರಣೆ
ರೈತ ದಿನ - ಅರ್ಥಪೂರ್ಣ ಆಚರಣೆ
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಕೃಷಿ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಕೃಷಿ ಕ್ಷೇತ್ರದ ಇತ್ತೀಚಿನ ಮಾಹಿತಿ ನೀಡುವ ಮೂಲಕ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು ಜಿಲ್ಲಾ ಪಂಚಾಯತ್ನ ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ರೇಷ್ಮೆ, ಪಶುಪಾಲನೆ ಮತ್ತು ಮೀನುಗಾರಿಕೆ, ವಾರ್ತಾ ಇಲಾಖೆ ಹಾಗೂ ಆಕಾಶವಾಣಿ, ಮೈಸೂರು ಸಹಯೋಗದೊಡನೆ ಜೆ.ಎಸ್.ಎಸ್. ಅಂಗವಿಕಲರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ರೈತ ದಿನ ಆಚರಿಸಲಾಯಿತು.
ಬಾನುಲಿ ಕೃಷಿ ಪ್ರಶಸ್ತಿ ಪಡೆದ ಹನುಮನಹಳ್ಳಿ ಇಂದಿರಮ್ಮ, ಕೃಷಿ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಸಿಂಧುವಳ್ಳಿ ಗ್ರಾಮದ ಶ್ರೀಮತಿ ರಾಜೇಶ್ವರಿ, ಕೃಷಿ ವಿ.ವಿ. ಅತ್ಯುತ್ತಮ ರೈತ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಮುದ್ದಹಳ್ಳಿ ನವಿಲೂರು ಗ್ರಾಮದ ಚಿಕ್ಕದೇವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಆಯೋಜಿಸಿದ್ದ ದ್ವಿದಳ ದೀಪ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ 30ಕ್ಕೂ ಹೆಚ್ಚು ರೈತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ: ಎನ್. ಮಂಜುಳಾ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವ ಮೂಲಕ ರೈತಪರ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿ ಹೊಂಡ ನಿರ್ಮಾಣವು ಸೇರಿದಂತೆ ಜಮೀನು ಸುಧಾರಣೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶ ಇದೆ. ಸಾಮಗ್ರಿ ವೆಚ್ಚ ನೀಡುವುದೂ ಸೇರಿದಂತೆ ರೈತರು ತಮ್ಮ ಜಮೀನಿನಲ್ಲಿ ಮಾಡುವ ಕೆಲಸಕ್ಕೂ ಕೂಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಕೃಷಿ ವಿಜ್ಞಾನಿ ಡಾ ಅರಸು ಮಲ್ಲಯ್ಯ ಅವರು ಮಾತನಾಡಿ ಹವಾಮಾನ ವೈಪರೀತ್ಯದಿಂದ ಮಣ್ಣಿನ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಶೇ. 20 ರಿಂದ 40ರಷ್ಟು ಇಳುವರಿ ಕುಂಠಿತವಾಗುತ್ತಿದೆ. ರೈತರು ಸ್ವತ: ವಿಜ್ಞಾನಿಗಳಾಗುವ ಮೂಲಕ, ಪ್ರಯೋಗಶೀಲರಾಗುವ ಮೂಲಕ ಇಂತಹ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಜಯಣ್ಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ: ರಾಘವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ: ನಾಗರಾಜ್ ಅವರು ತೋಟಗಾರಿಕೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ: ಚಿಗರಿ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ರೇಷ್ಮೆ ಕೃಷಿಗೆ ಸಂಬಂಧಿಸಿದ 15 ಕಾಮಗಾರಿಗಳನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ 30ಕ್ಕೂ ಹೆಚ್ಚು ದೇಶಿ ಭತ್ತದ ತಳಿ ಸಂರಕ್ಷಣೆ ಮಾಡಿರುವ ಕೃಷಿಕ ಟಿ. ನರಸೀಪುರ ತಾಲ್ಲೂಕು ಸಿದ್ದನಹುಂಡಿ ಗ್ರಾಮದ ಶ್ರೀ ಶ್ರೀನಿವಾಸ ಮೂರ್ತಿ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಬಿತ್ತನೆ ಬೀಜಗಳಿಗೆ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸುವ ಬದಲಿಗೆ ಸ್ವಾವಲಂಬನೆ ಸಾಧಿಸಿ, ಅಪರೂಪದ ತಳಿಗಳನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಡಿ. ರವಿಶಂಕರ್, ಜಿಲ್ಲಾ ಪಂಚಾಯತ್ ಸದಸ್ಯ ಚೋಳರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ: ವಿಷಕಂಠ ಸ್ವಾಗತಿಸಿದರು. ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ .ಆರ್. ಪ್ರಕಾಶ್, ಆಕಾಶವಾಣಿ ಪ್ರಸಾರ ನಿರ್ವಾಹಕ ಶ್ರೀ ಕೇಶವಮೂರ್ತಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೃಷಿ ಉದ್ಯಮಶೀಲತಾ ಕಾರ್ಯಗಾರ

ಕೃಷಿಕರು ಉದ್ಯಮಶೀಲರಾಗುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಿಜಯಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಶ್ರೀ ನಾಗೇಶ್ವರರಾವ್ ಹೇಳಿದರು.
ಮಂಡ್ಯದ ವಿಜಯಾ ಬ್ಯಾಂಕ್ ಸ್ವ ಉದ್ಯೋಗಿ ತರಬೇತಿ ಸಂಸ್ಥೆ, ಮೈಸೂರು ಆಕಾಶವಾಣಿ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಬಾನುಲಿ ಕೃಷಿಕರ ಬಳಗದ ಸಂಯುಕ್ತಾಶ್ರಯದಲ್ಲಿ ಮಂಡ್ಯದಲ್ಲಿ ಏರ್ಪಡಿಸಿರುವ ಐದು ದಿನಗಳ ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಮುದಾಯ, ಸಾಂಪ್ರದಾಯಿಕ ಕೃಷಿ ಜೊತೆಗೆ ಹೊಸ ಆಲೋಚನಾ ವಿಧಾನ ರೂಢಿಸಿಕೊಳ್ಳಬೇಕು. ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದುಕೊಳ್ಳಬೇಕು. ಮಾರುಕಟ್ಟೆ ಅವಕಾಶಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕೃಷಿಯಲ್ಲಿ ಉದ್ಯಮಶೀಲತೆ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇಂದಿನ ದಿನಗಳಲ್ಲಿ ಅತೀ ಅವಶ್ಯ. ಬೆಲೆ ಕುಸಿತದ ದಿನಗಳಲ್ಲಿ ಪರ್ಯಾಯ ಮಾರುಕಟ್ಟೆ ಬಗ್ಗೆ ಆಲೋಚಿಸಬೇಕು. ಹತಾಶ ಮಾರಾಟಕ್ಕೆ ಮೊರೆ ಹೋಗದೆ, ಮಾರುಕಟ್ಟೆ ತಂತ್ರಗಳನ್ನು ಅರಿತು, ಅಳವಡಿಸಿಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಗಾರ ಏರ್ಪಡಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ನಾಗೇಶ್ವರರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಬಾರ್ಡ್ ವ್ಯವಸ್ಥಾಪಕ ಟಿ. ರಾಮಸ್ವಾಮಿ ಅವರು ಮಾತನಾಡಿ ನಬಾರ್ಡ್ ವತಿಯಿಂದ ರಾಷ್ಟ್ರದಲ್ಲಿ 34 ಸಾವಿರ ರೈತರ ಕೂಟಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ರಾಜ್ಯದಲ್ಲಿ 3 ಸಾವಿರ ರೈತಕೂಟಗಳು ಇದ್ದು, ಮಂಡ್ಯ ಜಿಲ್ಲೆಯಲ್ಲಿ 82 ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೂಟಗಳ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಗ್ರಾಮೀಣ ಅವಿಷ್ಕಾರ ನಿಧಿ ಸ್ಥಾಪಿಸುವ ಮೂಲಕ ನಬಾರ್ಡ್ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ನೆರವು ನೀಡುತ್ತಿದೆ ಎಂದು ಶ್ರೀ ರಾಮಸ್ವಾಮಿ ಹೇಳಿದರು.
ರೈತರು ವಿಜ್ಞಾನಿ, ವ್ಯಾಪಾರಿ ಎಲ್ಲವೂ ಆಗುವ ಮೂಲಕ ಕೃಷಿ ಕ್ಷೇತ್ರಕ್ಕೆ ಚೈತನ್ಯ ನೀಡಬೇಕು. ಕೃಷಿ ಲಾಭದಾಯಕ ಉದ್ದಿಮೆ ಆಗುವಂತೆ ಮಾಡಲು ರೈತರಿಗೆ ಇಂತಹ ಕಾರ್ಯಗಾರ ಗಳ ಮೂಲಕ ಪ್ರೇರಣೆ ನೀಡಬೇಕಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ರಾವ್ ಅಭಿಪ್ರಾಯಪಟ್ಟರು.
ವಿಕಸನ ಸಂಸ್ಥೆಯ ಮಹೇಶ್ಚಂದ್ರ ಗುರು, ಆಕಾಶವಾಣಿ ಕಾರ್ಯಕ್ರಮಗಳ ನಿರ್ವಾಹಕ ಶ್ರೀ ವಿ.ಮಾ. ಜಗದೀಶ್, ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ ಎ.ಆರ್. ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯಾಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದರು. ಆಕಾಶವಾಣಿ ಮೈಸೂರು ಪ್ರಸಾರ ನಿರ್ವಾಹಕ ಶ್ರೀ ಎಸ್. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ 5 ದಿನಗಳ ಶಿಬಿರದ ಉದ್ದೇಶ ವಿವರಿಸಿದರು. ಕೃಷಿಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತಿತರ ಜಿಲ್ಲೆಗಳ ನಲವತ್ತಕ್ಕೂ ಹೆಚ್ಚು ರೈತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು .